ಕನೀಜ಼್ ಫಾತಿಮಾ (ಉರ್ದು: کنیز فاطمہ) ಒಬ್ಬ ಭಾರತೀಯ ರಾಜಕಾರಣಿ. ಇವರು ಕರ್ನಾಟಕ ವಿಧಾನಸಭೆಯ ಗುಲ್ಬರ್ಗಾ ಉತ್ತರ ಕ್ಷೇತ್ರದಿಂದ ೨ ಬಾರಿ ಶಾಸಕಿಯಾಗಿದ್ದಾರೆ. ಇವರು ಮಾಜಿ ಸಚಿವ, ದಿವಂಗತ ಕಮರ್-ಉಲ್-ಇಸ್ಲಾಂ ಅವರ ಪತ್ನಿ. ಕಮರ್-ಉಲ್-ಇಸ್ಲಾಂ ಅವರು ೨೦೧೩ ರಲ್ಲಿ ಅದೇ ಕ್ಷೇತ್ರದಿಂದ ಶಾಸಕರಾಗಿದ್ದರು. == ಕ್ಷೇತ್ರ == ಇವರು ಕರ್ನಾಟಕ ವಿಧಾನಸಭೆಯ ಗುಲ್ಬರ್ಗಾ ಉತ್ತರ (ವಿಧಾನ ಸಭಾ ಕ್ಷೇತ್ರ)ವನ್ನು ಪ್ರತಿನಿಧಿಸುತ್ತಾರೆ. == ರಾಜಕೀಯ ಜೀವನ == ಫಾತಿಮಾ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಪಕ್ಷದ ಸದಸ್ಯೆ. ಡಾ ಕಮರ್ ಉಲ್ ಇಸ್ಲಾಂ ನಿಧನದ ನಂತರ, ಫಾತಿಮಾ ಅವರು ಸ್ಪರ್ಧಿಸಲು ಆರಂಭದಲ್ಲಿ ನಿರಾಕರಿಸಿದ್ದರು. ಆದರೆ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಮತ್ತು ಜಿ.ಪರಮೇಶ್ವರ್ ಮುಂತಾದವರು ಅವರ ಮನವೊಲಿಸಿದರು. ಅಲ್ಲದೆ ಎಲ್ಲ ಸಮುದಾಯಗಳ ಜನರು ಆಕೆಯನ್ನು ಸ್ಪರ್ಧಿಸುವಂತೆ ಮನವೊಲಿಸಿದರು. ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, ಶಾಸಕ ಅಜಯ್ ಸಿಂಗ್, ವಹೇದ್ ಅಲಿ ಫತೇಖಾನಿ, ಬಾಬಾ ನಜರ್ ಮಹಮ್ಮದ್ ಖಾನ್, ಎಚ್‌ಕೆಇ ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ ಮೊದಲಾದ ಗುಲ್ಬರ್ಗದ ಹಲವು ಮುಖಂಡರು ಬೆಂಬಲಿಸಿ, ಅನುಕಂಪಕ್ಕಿಂತ ಹೆಚ್ಚಾಗಿ ಪತಿ ಕಮರ್-ಉಲ್-ಇಸ್ಲಾಂ ಅವರ ಕೊಡುಗೆಯನ್ನು ಎತ್ತಿ ಹಿಡಿದು ಚುನಾವಣಾ ಪ್ರಚಾರ ನಡೆಸಿದರು. ಚುನಾವಣೆಯಲ್ಲಿ ಜೆಡಿ(ಎಸ್‌)ನ ನಾಸಿರ್ ಹುಸೇನ್ ಉಸ್ತಾದ್ ಮತ್ತು ಬಿಜೆಪಿಯ ಚಂದ್ರಕಾಂತ್ ಪಾಟೀಲ್ ವಿರುದ್ಧ ೫,೯೪೦ ಮತಗಳಿಂದ ಗೆದ್ದರು. === ಸಿಎಎ ಪ್ರತಿಭಟನೆ === ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಕಲಬುರಗಿ ಪಟ್ಟಣದಲ್ಲಿ ಉತ್ತರ ಕರ್ನಾಟಕದಲ್ಲೇ ಅತಿ ದೊಡ್ಡ ಪ್ರತಿಭಟನೆ ನಡೆಯಿತು. ಸುಮಾರು ೧೫,೦೦೦ ಜನರು ಪ್ರತಿಭಟನಾ ಮೆರವಣಿಗೆಗೆ ಸೇರಿದ್ದರು. ರಾಜ್ಯದ ಮೇಲೆ ವಿಧಿಸಲಾದ ಸೆಕ್ಷನ್ ೧೪೪ ಅಧಿಸೂಚನೆಯನ್ನು ಧಿಕ್ಕರಿಸಿ ಹೊರಬಂದರು. ಶಾಸಕಿ ಕನೀಜ್ ಫಾತಿಮಾ ಅವರು ನಾಗರಿಕರನ್ನು ಒಟ್ಟುಸೇರಿಸುವಲ್ಲಿ ಪ್ರಮುಖ ಶಕ್ತಿಯಾಗಿದ್ದರು. ಎಲ್ಲಾ ಸ್ಥಳೀಯ ಕಾಂಗ್ರೆಸ್ ಕಾರ್ಪೊರೇಟರ್‌ಗಳು ಕೂಡ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. == ಪಡೆದ ಹುದ್ದೆಗಳು == == ವಿವಾದ == ಫಾತಿಮಾ ಅವರು ಗುಲ್ಬರ್ಗ ಬಳಿ ೨೨ ಎಕರೆ ಕೃಷಿ ಭೂಮಿ ಖರೀದಿಸಿದ್ದರು. ಈ ಖರೀದಿಯಲ್ಲಿ ಅಕ್ರಮ ನಡೆದಿದೆ ಹಾಗೂ ಕರ್ನಾಟಕ ಭೂಸುಧಾರಣಾ ಕಾಯ್ದೆ ೧೯೬೧ರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಮಾಜಿ ಸಚಿವ ಎಸ್.ಕೆ.ಕಾಂತಾ ದೂರು ದಾಖಲಿಸಿದ್ದರು. ಈ ಕಾಯಿದೆಯು ಕೃಷಿಕರನ್ನು ಹೊರತುಪಡಿಸಿ ಬೇರೆ ಯಾವುದೇ ವ್ಯಕ್ತಿಯಿಂದ ಕೃಷಿ ಭೂಮಿಯನ್ನು ಖರೀದಿಸುವುದನ್ನು ನಿಷೇಧಿಸುತ್ತದೆ. ಗುಲ್ಬರ್ಗ ತಹಶೀಲ್ದಾರ್ ಅವರು ಸಹಾಯಕ ಆಯುಕ್ತರಿಗೆ ನೀಡಿದ ವರದಿಯಲ್ಲಿ ಕಮರ್ ಉಲ್ ಇಸ್ಲಾಂ ಶಾಲೆಗಳನ್ನು ನಡೆಸುತ್ತಿದ್ದಾರೆ ಮತ್ತು ವಾಣಿಜ್ಯ ಸಂಕೀರ್ಣಗಳನ್ನು ಹೊಂದಿದ್ದಾರೆ. ಆದ್ದರಿಂದ ಫಾತಿಮಾ ಅವರ ವಾರ್ಷಿಕ ಆದಾಯವು ಎರಡು ಲಕ್ಷ ರೂ. ಆಗಿದೆ. ಕರ್ನಾಟಕ ಭೂಸುಧಾರಣಾ ಕಾಯ್ದೆಯ ನಿಬಂಧನೆಗಳನ್ನು ಖರೀದಿದಾರರು ಉಲ್ಲಂಘಿಸಿದ್ದಾರೆ ಎಂದು ಗಮನಿಸಿದ ಸಹಾಯಕ ಆಯುಕ್ತರು ಫಾತಿಮಾ ಅವರ ಜಮೀನು ಖರೀದಿಯನ್ನು ಬದಿಗಿಟ್ಟರು. ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಕರ್ನಾಟಕ ಸರ್ಕಾರವನ್ನು ಭೂಮಿಯ ಮಾಲೀಕ ಎಂದು ನಮೂದಿಸುವಂತೆ ಅವರು ತಹಶೀಲ್ದಾರ್‌ಗೆ ಸೂಚಿಸಿದ್ದಾರೆ. == ಉಲ್ಲೇಖಗಳು ==